ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಶ್ರಿಕಾಂಚೀ ಕಾಮಾಕ್ಷಿ ದೇವಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ
ಶ್ರೀಶಂಕರ ವಿಜಯೇಂದ್ರ ಸರಸ್ವತಿಸ್ವಾಮೀಜಿಗಳ ಅಮೃತಹಸ್ತದಿಂದ ಪ್ರಾಣಪ್ರತಿಷ್ಠಾಪನೆ
ವಿವಿಧ ಹೋಮಗಳಪೂರ್ಣಾಹುತಿ-ಕುಂಭಾಭಿಷೇಕ. * ಚರ್ತುವೇದ ಪಾರಾಯಣ

ಹೊಸಪೇಟೆ.ಏ.5-ನಗರದ ಗಾಂಧಿಕಾಲೋನಿ ಶ್ರಿಕಾಂಚೀ ಕಾಮಾಕ್ಷಿ ದೇವಸ್ಥಾನದಲ್ಲಿ ಏ.೬ರಂದು ಕಾಂಚೀ ಕಾಮಕೋಟಿ ಪೀಠಾಧಿಶ್ವರರಾದ ಶ್ರೀಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರಿಕಾಂಚೀ ಕಾಮಾಕ್ಷಿದೇವಿ ದೇವರ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ.
ದೇವಸ್ಥಾನದ ಆವರಣದಲ್ಲಿ ಬುಧವಾರ ಬೆಳಿಗ್ಗೆ ೯.೧೫ರಿಂದ ೧೦.೩೦ರವರೆಗೆ ಶುಭಲಗ್ನದಲ್ಲಿ ಶ್ರೀಕಾಂಚೀ ಕಾಮಾಕ್ಷಿದೇವಿ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿವಿಧ ಹೋಮಗಳ ಪೂರ್ಣಾಹುತಿ ನಡೆಯಲಿದ್ದು ಶ್ರೀಗಳಿಂದ ಕುಂಭಾಭಿಷೇಕ ನೆರವೇರಲಿದೆ. ನಂತರ ಅನುಗ್ರಹ ಸಂದೇಶ ನೀಡಲಿದ್ದಾರೆ.
ಪ್ರತಿಷ್ಠಾಪನೆ ಬಳಿಕ ಸಂಜೆ ೫ರಿಂದ ೭ರವರೆಗೆ ಅರಿಶಿಣ, ಕುಂಕುಮ, ಜೇನು, ಹಣ್ಣು ಹಂಪಲುಗಳ ಸೇರಿದಂತೆ ವಿವಿಧ ಮಂಗಲ ದ್ರವ್ಯಗಳಿಂದ ಪಂಚಾಮೃತಾಭಿಷೇಕ ನಡೆಲಿದ್ದು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗುವುದು.
ಪ್ರತಿರೂಪ: ತಮಿಳುನಾಡಿನ ಕಾಂಚೀ ಕಾಮಾಕ್ಷಿ ದೇವಿಯ ಪ್ರತಿರೂಪದಲ್ಲಿರುವಂತ ಪೀಠ ಸಮೇತವಾಗಿ ಸುಮಾರು ೪ರಿಂದ ೫ ಅಡಿಗಳಷ್ಟು ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ವಿಶೇಷವಾಗಿ ಕಾಂಚೀ ಕಾಮಾಕ್ಷಿ ಪ್ರದೇಶದಿಂದಲೇ ವಿಗ್ರಹವನ್ನು
ಸಿದ್ಧಪಡಿಸಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ದೇಗುಲದ ಶುದ್ಧಿ ಕಾರ್ಯ, ಧಾರ್ಮಿಕ ವಿಧಿವಿಧಾನಗಳು, ವಿಗ್ರಹಗಳ ಜಲಾಧಿವಾಸ, ಧಾನ್ಯಧಿವಾಸ, ಶಯ್ಯಾಧಿವಾಸ, ಬಿಂಬಿ ಶುದ್ಧೀಕರಣ ನಡೆಸಲಾಗಿದೆ. ಗಣಪತಿ, ನವಗ್ರಹ, ಸುದರ್ಶನ, ಲಕ್ಷ್ಮೀಹೋಮ, ಸುಬ್ರಮಣ್ಯ, ಶಾಸ್ತ್ರ ಹೋಮ, ವಾರಧಿ, ಕಾಮಾಕ್ಷಿ, ಶ್ರೀವಿದ್ಯಾ ಹೋಮ ನೆರವೇರಿಸಲಾಯಿತು.
ದೇವಿ ಪ್ರತಿಷ್ಠಾಪನೆ: ಕಾಂಚೀ ಕಾಮಾಕ್ಷಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ದೇಗುಲದ ಆವರಣದಲ್ಲಿ ಗಣಪತಿ, ಸುಬ್ರಮಣ್ಯ, ಶ್ರೀಆದಿಶಂಕರಾಚಾರ್ಯ, ರೂಪಲಕ್ಷ್ಮೀ, ಸ್ವರೂಪ ಲಕ್ಷ್ಮೀ, ಅನ್ನಪೂರ್ಣೇಶ್ವರಿ ದೇವತಾ ಪ್ರತಿಷ್ಠಾಪನೆ ಜರುಗಲಿದೆ. ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ಮಂಗಳವಾರ ಯಂತ್ರ ಪ್ರತಿಷ್ಠಾಪನೆ ಹಾಗೂ ಹೋಮ ಹವನ ನಡೆಯಿತು. ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಕಾಂಚೀ ಪೀಠದ ಪ್ರಧಾನ ಪುರೋಹಿತರಾದ ಪಂಡಿತ ಭರಣಿ ಶಾಸ್ತ್ರೀಗಳ ನೇತೃತ್ವದಲ್ಲಿ ಹಾಗೂ ಜಗದೀಶ್ ಭಟ್ ಅವರ ವ್ಯವಸ್ಥಾಪನದಲ್ಲಿ ಸುಮಾರು ೩೦ ಪುರೋಹಿತರ ತಂಡ ನಡೆಸುತ್ತಿದೆ. ಚರ್ತುವೇದ ಪಾರಾಯಣ ನಡೆಯುತ್ತಿದೆ. ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಜಿ. ರಂಗನಗೌಡ್ರು, ಮಾಜಿ ಸಂಸದ ಎಚ್.ಜಿ. ರಾಮುಲು, ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಸೇರಿದಂತೆ ಕುಟುಂಬದ ಸದಸ್ಯರು, ಗಣ್ಯರು, ಮುಖಂಡರು ಇದ್ದರು.