ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಆರ್. ಗವಿಯಪ್ಪ
2023 ಕ್ಕೆ ಸ್ಪರ್ಧೆ ಖಚಿತ. ಆದರೆ ಯಾವ ಪಕ್ಷದಿಂದ ಎಂಬುದು ಬಿಜೆಪಿ ನಡೆಯನ್ನು ಅವಲಂಬಿಸಿದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.

ವಿಜಯನಗರ, ಮಾ.31- 2023 ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಮಾಜಿ ಶಾಸಕ ಹೆಚ್. ಆರ್. ಗವಿಯಪ್ಪ ಹೇಳಿದರು.
ಹೊಸಪೇಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ಈ ಪಕ್ಷದಲ್ಲಿದ್ದವರು ನಾಳೆ ಮತ್ತೊಂದು ಪಕ್ಷದಲ್ಲಿರುತ್ತಾರೆ ಎಂದು ಹೇಳುವ ಮೂಲಕ ಸಚಿವ ಆನಂದ ಸಿಂಗ್ ಅವರ ನಡೆಯನ್ನು ಕೆಣಕಿ ಕುಟುಕುವ ಮೂಲಕ ಆನಂದ ಸಿಂಗ್ ಗೆ ಎದುರಾಳಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಸಚಿವ ಆನಂದ ಸಿಂಗ್ ಅವರ ರಾಜಕೀಯ ನಡೆಯಿಂದ ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಂಡೆ ಎಂದು ಅಸಮಾಧಾನ ಹೊರಹಾಕಿದರು.
ಸಿಂಗ್ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದಾಗ ತಾವು ಪಕ್ಷೇತರರಾಗಿ ಸ್ಪರ್ಧೆ ಮಾಡದಿರುವುದು ತಮ್ಮ ರಾಜಕೀಯ ಬದುಕಿನ ಬಹುದೊಡ್ಡ ತಪ್ಪು ಎಂದು ಮರುಗಿದರಲ್ಲದೆ ರಾಜಕೀಯದಲ್ಲಿ ಕರುಣೆಗೆ ಸ್ಥಾನವಿಲ್ಲ. ನಾನು ಬಿಜೆಪಿ ಟಿಕೆಟ್ ಬಿಟ್ಟು ತಪ್ಪು ಮಾಡಿದೆ. ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುವಂತೆ ಕೇಳಿ, ಆನಂದ ಸಿಂಗ್ ಅವರನ್ನು ಎಂ.ಎಲ್.ಸಿ ಮಾಡುವಂತೆ ಹೇಳಿರುವ ಗುಟ್ಟನ್ನು ರಟ್ಟು ಮಾಡಿದರು. 2023 ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ರಾಜ್ಯ ಕಾರ್ಯಕಾರಿಣಿ ಸಭೆ ಹೊಸಪೇಟೆಯಲ್ಲಿ ನಡೆಯುತ್ತಿದ್ದರೂ ನನಗೆ ಇದುವರೆಗೆ ಆಹ್ವಾನ ಬಂದಿಲ್ಲ ಎಂದು ಮನಿಸು ಹೊರ ಹಾಕಿದರು. 2023 ಕ್ಕೆ ಸ್ಪರ್ಧೆ ಖಚಿತ. ಆದರೆ ಯಾವ ಪಕ್ಷದಿಂದ ಎಂಬುದು ಬಿಜೆಪಿ ನಡೆಯನ್ನು ಅವಲಂಬಿಸಿದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.
ಆನಂದ ಸಿಂಗ್ ಅವರ ರಾಜಕೀಯ ದಾಳದಲ್ಲಿ ರಾಜಕೀಯ ನೇಪಥ್ಯಕ್ಕೆ ಸರಿದಿದ್ದ ಮಾಜಿ ಸಚಿವ ಗವಿಯಪ್ಪ ಇಂದು ಮಾಧ್ಯಮದವರೊಂದಿಗೆ ಮುಂದಿನ ನಡೆ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು